“ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗುವ ತಪಸ್ಸು ಕಾಲ (Season of Lent) ಎಂಬುದು ನಲವತ್ತು ದಿನಗಳ ಪವಿತ್ರ ಸಮಯವಾಗಿದ್ದು, ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಕ್ರೈಸ್ತರು ಮಾಂಸ ಸೇವನೆಯನ್ನು ತೊರೆದು, ಕ್ಷಮೆ ಹಾಗೂ ಪ್ರಾಯಶ್ಚಿತ್ತದ ಮೂಲಕ ಭಕ್ತಿಪೂರ್ವಕವಾಗಿ ಆಧ್ಯಾತ್ಮಿಕ ಆಚರಣೆಯಲ್ಲಿ ತೊಡಗುತ್ತಾರೆ. ಈ ನಲವತ್ತು ದಿನಗಳ ಉಪವಾಸ, ಪ್ರಾಯಶ್ಚಿತ್ತ ಹಾಗೂ ದಾನ-ಧರ್ಮವು ಯೇಸು ಕ್ರಿಸ್ತರ ಪೂಜ್ಯ ಯಾತನೆ, ಮರಣ ಮತ್ತು ಪುನರುತ್ಥಾನಕ್ಕೆ ಕ್ರೈಸ್ತರು ಆಧ್ಯಾತ್ಮಿಕವಾಗಿ ತಮ್ಮನ್ನೇ ತಾವು ಸಿದ್ದಪಡಿಸಿಕೊಳ್ಳುವ ಸಮಯವಾಗಿದೆ” ಎಂದು ಬೆಂಗಳೂರಿನ ಆರ್ಚ್ ಬಿಷಪ್ ಪರಮಪೂಜ್ಯ ಡಾ. ಪೀಟರ್ ಮಚಾದೊ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
“ತಪಸ್ಸುಕಾಲದ ನಲವತ್ತು ದಿನಗಳ ಮುಗಿದ ನಂತರ ಗರಿಗಳ ಭಾನುವಾರದಿಂದ ಆರಂಭವಾಗುವ ಪವಿತ್ರವಾರವು ಕ್ರೈಸ್ತರ ಪಾಲಿಗೆ ಅತ್ಯಂತ ಪವಿತ್ರ ಸಮಯವಾಗಿದ್ದು, ಈ ವಾರದಲ್ಲಿ ಬರುವ ಗುರುವಾರವನ್ನು ಪವಿತ್ರ ಗುರುವಾರವೆಂದು ಯೇಸು ಕ್ರಿಸ್ತರ ಕೊನೆಯ ಭೋಜನದ ಸಂಕೇತವಾಗಿ ಆಚರಿಸಲಾಗುತ್ತದೆ. ಯೇಸುಕ್ರಿಸ್ತರು ಮರಣ ಹೊಂದಿದ ದಿನವಾದ ಶುಕ್ರವಾರವನ್ನು ಶುಭ ಶುಕ್ರವಾರವೆಂದು ಕ್ರೈಸ್ತರು ಆಚರಿಸುತ್ತಾರೆ. ಕ್ರಿಸ್ತರು ಮನುಷ್ಯರ ಪಾಪಗಳಿಗಾಗಿ, ಅವರ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದಿನವು ಮಾನವ ಕುಲಕ್ಕೆ ಶುಭ ಸೂಚಕವಾದ ಕಾರಣ ಇದನ್ನು ಶುಭ ಶುಕ್ರವಾರ ಎಂದು ಕರೆಯವುದು ವಾಡಿಕೆಯಾಗಿದೆ. ಅದೇ ರೀತಿ, ಈಸ್ಟರ್ ಭಾನುವಾರವು ಯೇಸು ಕ್ರಿಸ್ತರು ಮರಣದಿಂದ ಮೂರು ದಿನದ ನಂತರ ಪುನರುತ್ಥಾನರಾದುದರ ಸಂಕೇತವಾಗಿದ್ದು, ಕ್ರೈಸ್ತರಿಗೆ ಇದು ಅತ್ಯಂತ ದೊಡ್ಡ ಹಬ್ಬವಾಗಿದೆ.” ಎಂದು ಹೇಳಿರುವ ಪರಮಪೂಜ್ಯ ಡಾ. ಪೀಟರ್ ಮಚಾದೊ , ” ಈ ಪವಿತ್ರ ದಿನಗಳಲ್ಲಿ ಕ್ರೈಸ್ತ ಸಮುದಾಯವು ತನ್ನ ಅವಶ್ಯಕತೆಗಳಿಗಾಗಿ ಪ್ರಾರ್ಥಿಸುವುದರ ಜೊತೆಗೆ ನಮ್ಮ ಪ್ರೀತಿಯ ಕರ್ನಾಟಕ ರಾಜ್ಯಕ್ಕೆ ಹಾಗೂ ಭಾರತ ದೇಶದ ಒಳಿತಿಗಾಗಿಯೂ ಪ್ರಾರ್ಥಿಸುತ್ತದೆ. ಈ ಪರಮ ಪವಿತ್ರ ಸಮಯದಲ್ಲಿ ಸರ್ವರನ್ನು ಭಗವಂತನು ಹರಸಲಿ ಎಂದು ಪ್ರಾರ್ಥಿಸುತ್ತಾ, ನಾಡಿನ ಜನತೆಗೆ ಈಸ್ಟರ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.” ಎಂದು ಶುಭ ಹಾರೈಸಿದ್ದಾರೆ.