ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಬಿಷಪ್ ಹೌಸ್ನಲ್ಲಿ “ಡ್ರಗ್ಸ್ ವಿರೊಧ ಜಾಗೃತಿ ಮಾಸ” ಅಭಿಯಾನಕ್ಕೆ ಚಾಲನೆ ನೀಡಿದರು. ಡ್ರಗ್ಸ್ ಮುಕ್ತ ಧರ್ಮಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿರುವ ಈ ಅಭಿಯಾನವು ಧರ್ಮಕ್ಷೇತ್ರದ ಪಾಲನಾ ಪರಿಷತ್ ನೇತೃತದಲ್ಲಿ ಮತ್ತು ಕುಟುಂಬ, ಯುವ, ಶಿಕ್ಷಣ, ಆರೋಗ್ಯ ಮತ್ತು ಸಂಪರ್ಕ ಮಾಧ್ಯಮ ಆಯೋಗಗಳ ಸಹಯೋಗದಲ್ಲಿ ನಡೆಯಲಿರುವುದು.
ಬಿಷಪ್ ಸಲ್ಡಾನ್ಹಾ ಆವರು ಡ್ರಗ್ಸ್ ಸಂಗ್ರಹದಿಂದ ತುಂಬಿದ ಗಾಜಿನ ಭರಣಿಯನ್ನು ಇನ್ಸಿನರೇಟರ್ ಫೈರ್ ಬಿನ್ಗೆ ಖಾಲಿ ಮಾಡಿ, ಭರಣಿಯೊಳಗೆ ಮುಳುಗಿರುವ ಮಗುವಿನ ಗೊಂಬೆಯನ್ನು ಮುಕ್ತಗೊಳಿಸುವುದರ ಮೂಲಕ ಸಾಂಕೇತಿಕವಾಗಿ ಆಭಿಯಾನವನ್ನು ಉದ್ಘಾಟಿಸಿದರು.
ಬಿಷಪ್ ಸಲ್ಡಾನ್ಹಾ ಅವರು ತಮ್ಮ ಸಂದೇಶದಲ್ಲಿ ನಗರದಲ್ಲಿನ ಮಾದಕ ದ್ರವ್ಯ ಬಿಕ್ಕಟ್ಟನ್ನು ಪರಿಹರಿಸುವ ತುರ್ತು ಕುರಿತು ಒತ್ತಿ ಹೇಳಿದರು.
ನಗರದಲ್ಲಿನ ಮಾದಕ ದ್ರವ್ಯಗಳ ಹಾವಳಿಯ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ನಾವು ಸಂವೇದನಾಶೀಲರಾಗದೇ ಹೋದರೆ, ನಾವು ಅಪರಾಧಿಗಳಾಗುತ್ತೇವೆ ಎಂದು ಅವರು ಹೇಳಿದರು. “ನಾವು ಸರ್ಕಾರ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು, ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡಿದಾಗ, ಈ ಹೋರಾಟವನ್ನು ಎದುರಿಸುವುದು ಸುಲಭವಾಗುತ್ತದೆ. ಮಾದಕ ವ್ಯಸನ ಪ್ರಕರಣಗಳಿಂದ ನಮ್ಮ ಕುಟುಂಬಗಳು, ಯುವಕರು ಮತ್ತು ಮಕ್ಕಳು ಬಳಲುತ್ತಿದ್ದಾರೆ. ಈ ಸಾಮಾಜಿಕ ಸಮಸ್ಸೆಗೆ ಒಮ್ಮನಸಿನಿಂದ ಸ್ಪಂದಿಸಲು ನಾನು ನಿಮಗೆ ಕರೆ ನೀಡುತ್ತೇನೆ. ಜಾತಿ, ಧರ್ಮ, ಧರ್ಮ ಮತ್ತು ಭಾಷೆಯ ಎಲ್ಲಾ ಗಡಿಗಳನ್ನು ಮೀರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ ಎಂದು ಬಿಷಪ್ ಕರೆ ನೀಡಿದರು.
ಡ್ರಗ್ಸ್ ತ್ಯಜಿಸಿ, ಜೀವನ ಆಲಿಂಗಿಸಿ ಎಂಬ ಘೋಷ ವಾಕ್ಯವನ್ನು ಹೊಂದಿರುವ ಅಭಿಯಾನವು, ಧರ್ಮಕ್ಷೇತ್ರದ ಚರ್ಚುಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೆಪ್ಟೆಂಬರ್ 1 ರಿಂದ 30 ರವರೆಗೆ ಇಡೀ ತಿಂಗಳಲ್ಲಿ ನಡೆಯುವುದು ಎಂದು ಅಭಿಯಾನದ ಸಂಚಾಲಕರಾದ ಶ್ರೀ ಲುವಿ ಜೆ ಪಿಂಟೋ ಅವರು ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಕ್ರೈಸ್ತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯೋಜಿಸಲಾದ ವ್ಯಾಪಕ ಪ್ರಯತ್ನಗಳನ್ನು ವಿವರಿಸುತ್ತಾ ಹೇಳಿದರು.
ಧರ್ಮಕ್ಷೇತ್ರದಿಂದ ಈ ಆಭಿಯಾನದಡಿ ಆಯೋಜಿಸಿದ ಕಾರ್ಯ -ಚಟುವಟಿಕೆಗಳು:
ಡ್ರಗ್ಸ್ ವಿರುದ್ಧ ವಿಶೇಷ ಪ್ರಾರ್ಥನೆ : ಸೆಪ್ಟೆಂಬರ್ 1 ರಿಂದ 3ರವರೆಗೆ ಧರ್ಮಕ್ಷೇತ್ರದ ಎಲಾ ಚರ್ಚುಗಳಲ್ಲಿ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮಗಳೊಂದಿಗೆ ಅಭಿಯಾನ ಆರಂಭಗೊಳ್ಳಲಿದೆ. ಚರ್ಚುಗಳು, ಶಾಲಾ-ಕಾಲೇಜು ಹಾಗೂ ಸಂಸ್ಥೆಗಳ ಆವರಣದಲ್ಲಿ ಕನ್ನಡ, ಇಂಗ್ಲೀಷ್, ಕೊಂಕಣಿಯಲ್ಲಿ ಡ್ರಗ್ಸ್ ವಿರುದ್ಧ ಅಭಿಯಾನದ ಲೋಗೊದೊಂದಿಗೆ ಬ್ಯಾನರ್ ಅಳವಡಿಕೆ, ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಕರಪತ್ರ ವಿತರಣೆ ಹಾಗೂ ಮೊಂತಿ ಹಬ್ಬ (ಕುರು ಹಬ್ಬ) ಕ್ಕೆ ಪೂರ್ವ ನಡೆಯುವ ನೊವೆನಾ ಸಂದರ್ಭ ಚರ್ಚುಗಳಲ್ಲಿ ಡ್ರಗ್ಸ್ ವಿರುದ್ಧ ವಿಶೇಷ ಪ್ರಾರ್ಥನೆ ನಡೆಸಲು ಕರೆ ನೀಡಲಾಗಿದೆ.
ಡ್ರಗ್ಸ್ ಜಾಗೃತಿ ಬಗ್ಗೆ ವಿಶೇಷ ಬೋಧನೆ : ಸೆಪ್ಟೆಂಬರ್ 3 ರಂದು ಎಲ್ಲ ಚರ್ಚುಗಳಲ್ಲಿ ಪೂಜಾ ಸಮಯದಲ್ಲಿ ಡ್ರಗ್ಸ್ ಜಾಗೃತಿ ಬಗ್ಗೆ ವಿಶೇಷ ಬೋಧನೆ ನಡೆಯಲಿದೆ. ಹೈಸ್ಕೂಲ್ ಹಾಗೂ ಪಿಯುಸಿಯ ಮಕ್ಕಳ ಕ್ರೈಸ್ತ್ತ ಧಾರ್ಮಿಕ ಭೋಧನ ಸಮಯದಲ್ಲಿ ಈ ಕುರಿತು ಪಠ್ಯ ಬೋಧನೆಗೆ ಸೂಚಿಸಲಾಗಿದೆ. ಚರ್ಚ್ಮಟ್ಟದಲ್ಲಿ ಘೋಷಣೆ, ಕಿರು ವೀಡಿಯೊ, ರೀಲ್ಸ್ ಸ್ಪರ್ಧೆ, ಘೋಷಣೆಯೊಂದಿಗೆ ಸೆಲ್ಫಿ ಸ್ಪರ್ಧೆ ನಡೆಸಿ ಬಳಿಕ ಧರ್ಮಕೇಂದ್ರ ಮಟ್ಟದಲ್ಲಿಯೂ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಗುವದು. ಯುವಕರನ್ನು ಒಗ್ಗೂಡಿಸಿ ಡ್ರಗ್ಸ್ ವಿರುದ್ಧ ಮನವರಿಕೆ ಮಾಡುವ, ನಿಟ್ಟಿನಲ್ಲಿ ವಾಕಥಾನ್, ರ್ಯಾಲಿ, ಡ್ರೆಸ್-ಪರೇಡ್, ಸಂಗೀತ ಸಂಜೆ, ಕಿರು ನಾಟಕ, ಬೀದಿ ನಾಟಕದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
45 ಕೌನ್ಸೆಲಿಂಗ್ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಜಾಗೃತಿ : ಯುವಜನರು ಮತ್ತು ಪೋಷಕರಿಗೆ ಜಾಗೃತಿ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲು ಎಲ್ಲಾ ಚರ್ಚುಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಲಹೆ. ಈ ನಿಟ್ಟಿನಲ್ಲಿ ಧರ್ಮಕ್ಷೇತ್ರದ ಮಟ್ಟದಲ್ಲಿ ಈಗಾಗಲೇ ಕೌನ್ಸೆಲಿಂಗ್ ತಜ್ಞರನ್ನು ಡ್ರಗ್ಸ್ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ತರಬೇತುಗೊಳಿಸಲಾಗಿದೆ. ಅವರು ಚರ್ಚುಗಳಲ್ಲಿ ಆವರ ಆನೂಕೂಲತೆಯಂತೆ ಆಯೋಜಿಸುವ ಕಾರ್ಯಾಗಾರಗಳಲ್ಲಿ ಡ್ರಗ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಧರ್ಮಕ್ಷೇತ್ರದ ಮಾಧ್ಯಮ ಆಯೋಗದಿಂದ ಜಾಗೃತಿ ಮೂಡಿಸುವ ವೀಡಿಯೊ ತುಣುಕು, ಮಾಹಿತಿಯ ಪೋಟೋ, ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡಾಲಾಗುವುದು. ಸೆಪ್ಟೆಂಬರ್ನಲ್ಲಿ ಚರ್ಚುಮಟ್ಟದಲ್ಲಿ ಹೊರತರಲಾಗುವ ಮ್ಯಾಗಝೀನ್ಗಳಲ್ಲಿ ಡ್ರಗ್ಸ್ ವಿರುದ್ಧ ವಿಶೇಷ ಲೇಖನಗಳನ್ನು ಪ್ರಕಟಿಸಲಾಗುವುದು.
ಆತೀ ವಂದನೀಯ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ, ಪಾಲನಾ ಪರಿಷತ್ ಕಾರ್ಯದರ್ಶಿ ಡಾ| ಜಾನ್ ಡಿಸಿಲ್ವಾ, , ಅಭಿಯಾನದ ಸಂಚಾಲಕರು ಶ್ರೀ ಲುವಿ ಜೆ ಪಿಂಟೋ, ಸಂಪರ್ಕಾಧಿಕಾರಿ ಶ್ರೀ ರಾಯ್ ಕ್ಯಾಸ್ಟೆಲಿನೊ, ತೆಲೊಕಾ ಅಡಿಕ್ಷನ್ ರಿಕವರಿ ಸೆಂಟರ್, ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿ, ಶ್ರೀಮತಿ ಕ್ಲಾರಾ ಡಿಕುನ್ಹಾ, ಕುಟುಂಬ ಆಯೋಗದ ಕಾರ್ಯದರ್ಶಿ ವಂದನೀಯ ಅನಿಲ್ ಆಲ್ಫ್ರೆಡ್ ಡಿಸೊಜಾ, ಶಿಕ್ಷಣ ಆಯೋಗದ ಕಾರ್ಯದರ್ಶಿ ವಂದನೀಯ ಆಂಟೋನಿ ಶೇರಾ, ಆರೋಗ್ಯ ಆಯೋಗದ ಕಾರ್ಯದರ್ಶಿ ವಂದನೀಯ ಅಜಿತ್ ಮಿನೇಜಸ್, ಯುವ ಆಯೋಗದ ಕಾರ್ಯದರ್ಶಿ ವಂದನೀಯ ಅಶ್ವಿನ್ ಕಾರ್ಡೋಜಾ ಮತ್ತು ಮಾಧ್ಯಮ ಮತ್ತು ಸಂಪರ್ಕ ಆಯೋಗದ ಕಾರ್ಯದರ್ಶಿ ವಂದನೀಯ ಅನಿಲ್ ಐವನ್ ಫೆನಾಂಡಿಸ್ ಉಪಸ್ಥಿತರಿದ್ದರು.