ಮಂಗಳೂರು ಧರ್ಮಕ್ಷೇತ್ರದ ಕಥೋಲಿಕ್ ಶಿಕ್ಷಣ ಮಂಡಳಿ (CBE) ವತಿಯಿಂದ ಮೊ। ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಬಜ್ಜೋಡಿಯ ಶಾಂತಿ ಕಿರಣ್ ಪಾಲನಾ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಂದನೀಯ ಮೊ। ಲೆಸ್ಲಿ ಎಫ್. ಶೆಣೈ ಅವರು ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪ್ರಥಮ ಪಿಯು ಶಿಕ್ಷಣವನ್ನು ಪಡೆಯುತ್ತಿರುವ 76 ಅರ್ಹ ಕಥೋಲಿಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿದ್ಯಾರ್ಥಿವೇತನದ ಚೆಕ್ಗಳನ್ನು ಹಸ್ತಾಂತರಿಸಿದರು.
ಗೌರವ ಅತಿಥಿಗಳಾದ ಮುಲ್ಕಿಯ ಧರ್ಮಗುರುಗಳಾದ ಮತ್ತು ಕಥೋಲಿಕ್ ಶಿಕ್ಷಣ ಮಂಡಳಿಯ ಮಾಜಿ ಕಾರ್ಯದರ್ಶಿ ಫಾ. ಆಂಟೋನಿ ಶ್ಹೇರಾ ಅವರು ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಾರಂಭದ ಬಗ್ಗೆ ಒಳನೋಟಗಳನ್ನು ನೀಡುತ್ತಾ “ಮೊ। ಲೆಸ್ಲಿ ಶೆಣೈ ಅವರು ಯಾವಾಗಲೂ ಉದಾರ ಮನಸುಳ್ಳವರು. ಸಮುದಾಯದ ಸುಧಾರಣೆಗಾಗಿ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾರೆ. ಎಲ್ಲಾ ವರ್ಗದ ಜನರಿಗೆ ಅವರು ಸ್ಪಂದಿಸುತ್ತಾರೆ ಮತ್ತು ಅವರ ಈ ಉದಾತ್ತ ಕೆಲಸವು ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ದಯಾಮಯ ಕಾರ್ಯಕ್ಕಾಗಿ ನಾವು ಅವರಿಗೆ ಚಿರಋಣಿಯಾಗಿರೋಣ,” ಎಂದು ಹೇಳಿದರು.
ಕಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂದನೀಯ ಡಾ. ಪ್ರವೀಣ್ ಲಿಯೋ ಲಸ್ರಾದೊ, ಮತ್ತು ಸಂತ ಅಲೋಶಿಯಸ್ ಕಾಲೇಜು (ಪರಿಗಣಿತ ವಿಶ್ವವಿದ್ಯಾನಿಲಯ), ಮಂಗಳೂರು ನಲ್ಲಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ, ಹಾಗೂ ಕಥೋಲಿಕ್ ಶಿಕ್ಷಣ ಮಂಡಳಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಡೆನಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ವಂದನೀಯ ಮೊ। ಲೆಸ್ಲಿ ಶೆಣೈ ಅವರು ಸ್ಕಾಲರ್ಶಿಪ್ ಪಡೆದ ವಿಧ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಉದ್ದೇಶಿಸುತ್ತಾ, “ಈ ದಯೆಯ ಕ್ರೀಯೆಯು ಯೇಸುವಿನ ‘ನಿನ್ನ ನೆರೆಯವರನ್ನು ಪ್ರೀತಿಸು’ ಎಂಬ ಆಜ್ಞೆಯಲ್ಲಿ ಬೇರೂರಿದೆ. ನನ್ನ ಮಿಲಿಟರಿ ಸೇವೆಯ ಉಳಿತಾಯದಿಂದಾಗಿ ಈ ವಿದ್ಯಾರ್ಥಿವೇತನಗಳನ್ನು ನೀಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯನ್ನು ಹೊರತುಪಡಿಸಿ ನಾನು ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ನಿಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ ಮತ್ತು ಅವಕಾಶ ಬಂದಾಗ ನಿಮ್ಮ ಆಶೀರ್ವಾದವನ್ನು ಇತರರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.” ಎಂದು ಹೇಳಿದರು.
ಡಾ. ಪ್ರವೀಣ್ ಲಿಯೋ ಲಸ್ರಾದೊ ಸ್ವಾಗತಿಸಿದರು, ಡಾ.ಡೆನಿಸ್ ಫೆರ್ನಾಂಡಿಸ್ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಮಂಗಳೂರಿನ ಪಾದುವ ಕಾಲೇಜಿನ ಉಪ ಪ್ರಾಂಶುಪಾಲರಾದ ರೋಶನ್ ಸಂತುಮಾಯರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿಧ್ಯಾರ್ಥಿ ವೇತನದ ಬಗ್ಗೆ
ವಂದನೀಯ ಮೊ। ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನವು ಕಥೋಲಿಕ್ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಕಥೋಲಿಕ ವಿದ್ಯಾರ್ಥಿ ಬೆಂಬಲ ಕಾರ್ಯಕ್ರಮಕ್ಕಾಗಿ ಅಂದಿನ ಕಾರ್ಯದರ್ಶಿ ವಂದನೀಯ ಅಂಟೋನಿ ಶೇರಾ ಅವರ ದೂರದೃಷ್ಟಿಯಿಂದ ಹುಟ್ಟಿಕೊಂಡಿತು . ವಂದನೀಯ ಮೊ। ಲೆಸ್ಲಿ ಶೆಣೈ ಅವರ 1 ಕೋಟಿ ರೂಪಾಯಿಗಳ ಉದಾರ ದೇಣಿಗೆಯ ಮೂಲಕ ಈ ಕನಸು ಸಾಕಾರಗೊಂಡಿದೆ. ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿ, ಅದರ ಬಡ್ಡಿಯೊಂದಿಗೆ ಮಂಗಳೂರು ಧರ್ಮಪ್ರಾಂತ್ಯದೊಳಗಿನ ಅರ್ಹ ಕಥೋಲಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಬಳಸಲಾಗುತ್ತದೆ. ಈಗಿನ ಕಥೋಲಿಕ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರಾದೊ ಅವರು ಈ ವರ್ಷದಿಂದ ವಿದ್ಯಾರ್ಥಿವೇತನದ ವಿತರಣೆಯನ್ನು ಪ್ರಾರಂಭಿಸಿದರು.